![](http://mysuruzoo.info/public/storage/uploads/1650532745.png)
ವಿಶ್ವವಿಖ್ಯಾತ ಮೈಸೂರು ಮೃಗಾಲಯವು ಅದರ ಅತ್ಯುತ್ತಮ ನಿರ್ವಹಣೆಯಿಂದ ಸಾರ್ವಜನಿಕ ಪ್ರಶಂಸೆಗೆ ಪಾತ್ರವಾಗಿರುವುದಲ್ಲದೆ, ದೇಶ ಮತ್ತು ಏಷ್ಯಾ ಖಂಡದಲ್ಲೇ ಅತ್ಯುತ್ತಮ ಮೃಗಾಲಯಗಳಲ್ಲಿ ಸ್ಥಾನವನ್ನು ಹೊಂದಿರುವ ಮೃಗಾಲಯಕ್ಕೆ ವಾರ್ಷಿಕ 33 ಲಕ್ಷಕ್ಕೂ ಅಧಿಕ ವೀಕ್ಷಕರು ಭೇಟಿ ನೀಡುತ್ತಿರುವ ದಾಖಲೆ ಹೊಂದಿರುವುದು ಹೆಮ್ಮೆಯ ವಿಷಯವಾಗಿರುತ್ತದೆ.
ಮೃಗಾಲಯದ ವೀಕ್ಷಕ ಪ್ರವಾಸಿಗರಿಗೆ ಸುಗಮ ಸಂಚಾರಕ್ಕೆ ಸಾಧ್ಯವಾದ ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದ್ದರೂ, ಮೃಗಾಲಯಕ್ಕೆ ಬರುತ್ತಿರುವ ವೀಕ್ಷಕರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿರುವುದರಿಂದ ಮೃಗಾಲಯದ ಮುಂಭಾಗದಲ್ಲಿನ ವಾಹನ ಸಂಚಾರದ ದಟ್ಟಣೆಯೂ ಹೆಚ್ಚಾಗುತ್ತಿದ್ದು, ಇದರಿಂದ ಮೃಗಾಲಯ ವೀಕ್ಷಕರು ಮಾತ್ರವಲ್ಲ ಸಾರ್ವಜನಿಕರೂ ಒಳಗೊಂಡಂತೆ ಬಹಳಷ್ಟು ತೊಂದರೆಗಳನ್ನು ಅನುಭವಿಸುತ್ತಿರುವುದನ್ನು ಗಮನಿಸಲಾಗಿರುತ್ತದೆ. ಮೃಗಾಲಯಕ್ಕೆ ಭೇಟಿ ನೀಡುವ ವೀಕ್ಷಕರಿಗೆ ವಾಹನಗಳ ದಟ್ಟಣೆಯ ನಡುವೆ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡುವುದೂ ಕೂಡಾ ಮೃಗಾಲಯದ ಜವಾಬ್ದಾರಿಯಾಗಿರುತ್ತದೆ.
ಆದುದರಿಂದ, ವೀಕ್ಷಕರಿಗೆ/ಸಾರ್ವಜನಿಕರಿಗೆ ಅನುಕೂಲತೆ ಕಲ್ಪಿಸುವ ಸಲುವಾಗಿ ಮೃಗಾಲಯದ ಮುಂದಿನ ಪಾರ್ಕಿಂಗ್ ಸ್ಥಳದಿಂದ ಮೃಗಾಲಯದ ಮುಖ್ಯ ಪ್ರವೇಶ ದ್ವಾರದ ವರೆಗೆ “ಅಂಡರ್ ಪಾಸ್” ನಿರ್ಮಾಣ ಕಾಮಗಾರಿಯನ್ನು 2019-20ನೇ ಆರ್ಥಿಕ ಸಾಲಿನಲ್ಲಿ ಪ್ರಾರಂಭಿಸಿ, ಡಿಸೆಂಬರ್ 2021ರಲ್ಲಿ ಪೂರ್ಣಗೊಳಿಸಲಾಗಿರುತ್ತದೆ. ಈ ಕಾಮಗಾರಿಗೆ ರೂ.189.00 ಲಕ್ಷಗಳನ್ನು ವಿನಿಯೋಗಿಸಲಾಗಿದ್ದು, ಮೆ. ವಿನ್ಯಾಸ್ ಬಿಲ್ಡರ್ಸ್, ಬೆಂಗಳೂರು, ರವರು ಈ ಕಾಮಗಾರಿಯ ಟೆಂಡರ್ದಾರರಾಗಿರುತ್ತಾರೆ.
ಮೃಗಾಲಯಕ್ಕೆ ಭೇಟಿ ನೀಡುವ ವಿಕ್ಷಕರು ಮೃಗಾಲಯದ ಪಾರ್ಕಿಂಗ್ನಿಂದ ಅಂಡರ್ ಪಾಸ್ ಮೂಲಕ ಮೃಗಾಲಯದ ಮುಖ್ಯ ದ್ವಾರಕ್ಕೆ ಪ್ರವೇಶಿಸಿ, ಪ್ರವೇಶ ಟಿಕೆಟ್ ಪಡೆಯುವ ಅನುಕೂಲ ಕಲ್ಪಿಸಲಾಗಿದ್ದು, ಇದರಿಂದ ಮೃಗಾಲಯದ ಮುಂಭಾಗದಲ್ಲಿ ಸಂಚಾರ ದಟ್ಟಣೆಯಾಗದೆ ವೀಕ್ಷಕರು ಮತ್ತು ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ.
ದಿನಾಂಕ 2/3/2022ರಂದು ಬೆಳಿಗ್ಗೆ 10.00 ಘಂಟೆಗೆ ಈ ಕೆಳಸೇತುವೆಯ (ಅಂಡರ್ ಪಾಸ್) ಉದ್ಘಾಟನೆಯನ್ನು ಕರ್ನಾಟಕ ಸರ್ಕಾರದ ಸನ್ಮಾನ್ಯ ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಮಂತ್ರಿಗಳಾದ ಸನ್ಮಾನ್ಯ ಶ್ರೀ ಎಸ್.ಟಿ. ಸೋಮಶೇಖರ್ರವರು ನೇರವೇರಿಸಿದರು. ಈ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಎಸ್. ಎ. ರಾಮದಾಸ್, ಶಾಸಕರು ಕೃಷ್ಣರಾಜ ಕ್ಷೇತ್ರ, ಇವರು ವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ಪ್ರತಾಪ ಸಿಂಹ, ಮಾನ್ಯ ಲೋಕಸಭಾ ಸದಸ್ಯರು, ಮೈಸೂರು ಮತ್ತು ಕೊಡಗು ಕ್ಷೇತ್ರ, ಶ್ರೀಮತಿ ಸುನಂದ ಪಾಲನೇತ್ರ, ಮೈಸೂರಿನ ಪೂಜ್ಯ ಮಹಾಪೌರರು, ಶ್ರೀ ಸಿ.ಎನ್. ಮಂಜೇಗೌಡ, ಶಾಸಕರು, ವಿಧಾನ ಪರಿಷತ್, ಶ್ರೀ ಎಲ್.ಆರ್. ಮಹದೇವ ಸ್ವಾಮಿ, ಅಧ್ಯಕ್ಷರು, ಕರ್ನಾಟಕ ಮೃಗಾಲಯ ಪ್ರಾಧಿಕಾರ, ಶ್ರೀ ಹೆಚ್.ವಿ. ರಾಜೀವ್, ಅಧ್ಯಕ್ಷರು, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ, ಶ್ರೀ ಕೃಷ್ಣಪ್ಪ ಗೌಡ ಎಂ.ಆರ್. ಅಧ್ಯಕ್ಷರು, ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ, ಬೆಂಗಳೂರು, ಶ್ರೀ ಅಪ್ಪಣ್ಣ, ಅಧ್ಯಕ್ಷರು, ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ಸ್, ಬೆಂಗಳೂರು, ಶ್ರೀ ಬಿ.ಪಿ. ರವಿ, ಭಾ.ಅ.ಸೇ., ಸದಸ್ಯ ಕಾರ್ಯದರ್ಶಿಗಳು, ಕರ್ನಾಟಕ ಮೃಗಾಲಯ ಪ್ರಾಧಿಕಾರ, ಶ್ರೀ ಗೋಕುಲ ಗೋರ್ವರ್ಧನ್ ಮತ್ತು ಶ್ರೀಮತಿ ಜ್ಯೋತಿ ರೇಚಣ್ಣ, ಸದಸ್ಯರು, ಕರ್ನಾಟಕ ಮೃಗಾಲಯ ಪ್ರಾಧಿಕಾರ, ಶ್ರೀಮತಿ ಛಾಯಾದೇವಿ, ಸದಸ್ಯರು, ಮೈಸೂರು ನಗರಪಾಲಿಕೆ, ಇತರೆ ಜನಪ್ರತಿನಿಧಿಗಳು ಹಾಗೂ ಮೈಸೂರು ಜಿಲ್ಲಾ ಆಡಳಿತದ ಅಧಿಕಾರಿಗಳು ಉಪಸ್ಥಿತರಿದ್ದರು.
ಅಜೀತ ಕುಲಕರ್ಣಿ ಭಾ.ಅ.ಸೇ.,
ಕಾರ್ಯನಿರ್ವಾಹಕ ನಿರ್ದೇಶಕರು,
ಶ್ರೀ ಚಾಮರಾಜೇಂದ್ರ ಮೃಗಾಲಯ,
ಮೈಸೂರು